ರಸ್ತೆ ಗುಂಡಿಗೆ ಮತ್ತೊಬ್ಬ ಯುವಕ ಬಲಿ
ಬೆಂಗಳೂರು: ಥಣಿಸಂದ್ರ ಮುಖ್ಯರಸ್ತೆಯ ಗುಂಡಿಯಲ್ಲಿ ಸ್ಕೂಟರ್ ಸವಾರ ಅಜಿಂ ಅಹ್ಮದ್ ಎಂಬುವವರು ಬಿದ್ದಿದ್ದು, ಅವರ ಮೇಲೆ ಗೂಡ್ಸ್ ವಾಹನ ಚಲಿಸಿ ಹೋದ ಪರಿಣಾಮ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಉಸ್ತುವಾರಿಯಾಗಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸವಿತಾ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಿಂ ಅಹ್ಮದ್ ಥಣಿಸಂದ್ರ ಕಡೆಯಿಂದ ಹೆಗಡೆ ನಗರದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಇದೇ ರಸ್ತೆಯ ಪ್ರಕಾಶ್ ಹಾರ್ಡ್ವೇರ್ , ಎಲೆಕ್ಟ್ರಿಕಲ್ ಶಾಪ್ ಮುಂಭಾಗದ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದ ಗುಂಡಿಯನ್ನು ಗಮನಿಸದೇ ವಾಹನ ಇಳಿಸಿದ್ದರಿಂದ, ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ರಸ್ತೆಯ ಅದೇ ದಿಕ್ಕಿನಿಂದ ಬಂದ ಗೂಡ್ಸ್ ವಾಹನದ ಚಾಲಕ, ಸ್ಕೂಟರ್ ಸವಾರನ ತೊಡೆಯ ಮೇಲೆ ವಾಹನವನ್ನು ಚಲಾಯಿಸಿದ್ದಾನೆ. ಇದರಿಂದ ಸವಾರನ ತೊಡೆ ಮತ್ತು ಬಲಗೈಗೆ ತೀವ್ರವಾದ ಗಾಯಗಳಾಗಿವೆ. ನಂತರ ಹೆಚ್ಚಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
news desk
times of bengaluru