ಬೆಂಗಳೂರು : ಹಿರಿಯ ನಾಗರಿಕರಿಗೆ ಯಲಹಂಕ ಕ್ಷೇತ್ರದಲ್ಲಿ ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ವಿತರಿಸುವ ಕಾರ್ಯವನ್ನು ಇಂದು ಪ್ರಾರಂಭಿಸಲಾಗಿದೆ. ದಾಸನಪುರ ಹೋಬಳಿಯಲ್ಲೂ ಇದೇ ರೀತಿ ವ್ಯವಸ್ಥೆ ರೂಪಿಸಿ ಹೆಚ್ವು ಹಿರಿಯ ನಾಗರಿಕರಿಗೆ ಲಸಿಕೆ ಸಿಗುವಂತೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ. ಅವರು ಇಂದು ದಾಸನಪುರ ಹೋಬಳಿಯ ಕಮ್ಮಸಂದ್ರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು, ಈ ವರೆಗೆ ಶೇ. 90ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇದೀಗ ಎರಡನೇ ಹಂತದಲ್ಲಿ ಮುಂಚೂಣಿ ಕೊರೊನಾ ಯೋಧರಿಗೆ ಲಸಿಕೆ ಕೊಡಲಾಗುತ್ತಿದೆ. ಜೊತೆಗೆ 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ 45 ರಿಂದ 59 ವರ್ಷ ವಯೋಮಿತಿಯೊಳಗಿನ ಅಸ್ವಸ್ಥತೆಯುಳ್ಳ ಸಾರ್ವಜನಿಕರಿಗೆ ಲಸಿಕೆ ಕೊಡಲಾಗುತ್ತಿದೆ ಎಂದರು.
NEWS DESK
TIMES OF BENGALURU