ಬೆಂಗಳೂರು: ಕೊರೊನಾ ನೆಪವೊಡ್ಡಿ ಚಳುವಳಿ ಪ್ರತಿಭಟನೆಗೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮವನ್ನು ಖಂಡಿಸಿ ವಾಟಾಳ್ ನಾಗರಾಜ್ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಸಿನಿಮಾ ಮಂದಿರ, ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ, ಮದುವೆಗಳಿಗೆ, ಬ್ಯಾಂಕ್, ಕಚೇರಿಗಳಲ್ಲಿ ನೂರಾರು ಜನರು ಹೋಗಲು ಅವಕಾಶವಿದೆ.
ಆದರೆ ಪ್ರತಿಭಟನೆ, ಚಳುವಳಿ ಮಾಡುವಂತಿಲ್ಲ ಎಂದು ಹೇಳಿರುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ, ರ್ಯಾಲಿ, ಸಮಾರಂಭಗಳಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಮಾಲ್, ಮಾರುಕಟ್ಟೆಗಳಲ್ಲಿ ಜನಜಂಗುಳಿ ಇರುತ್ತದೆ. ಇದಾವುದನ್ನು ನಿಯಂತ್ರಿಸದ ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ನಿರ್ಬಂಧ ಮಾಡುವುದಾದರೆ ಎಲ್ಲವನ್ನು ನಿರ್ಬಂಧಿಸಲಿ ಅದನ್ನು ಬಿಟ್ಟು ತಮಗೆ ಬೇಕಾದದ್ದು ಇರಲಿ, ಬೇಡವಾದದ್ದಕ್ಕೆ ಕಡಿವಾಣ ಹಾಕೋಣ ಎಂಬ ಧೋರಣೆಗೆ ತಮ್ಮ ವಿರೋಧವಿದೆ ಎಂದು ಹೇಳಿದರು.
NEWS DESK
TIMES OF BENGALURU