ಬೆಂಗಳೂರು: 2006 ನವೆಂಬರ್ 5 ರಂದು ಕೇರಳ ಮೂಲದ ವ್ಯಕ್ತಿಯನ್ನ ದುಷ್ಕರ್ಮಿಗಳು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರಂತೆ. ಬೆಂಗಳೂರಿನ ಯಶವಂತಪುರದ ಬಿ.ಕೆ ನಗರದ ಮನೆಯಲ್ಲಿ ಹತ್ಯೆ ನಡೆದಿದ್ದು, ಕೇರಳ ಮೂಲದ ಶಶಿಧರ್ ಎಂಬಾತನನ್ನ ಹತ್ಯೆ ಮಾಡಿದ್ದರಂತೆ. ಕೈ, ಕಾಲು ಮತ್ತು ಮುಖಕ್ಕೆ ಟೇಪ್ ಸುತ್ತಿ ಶಶಿಧರ್ ನನ್ನು ನಿಗೂಢವಾಗಿ ಹತ್ಯೆ ಮಾಡಿದ್ದರು. ಈ ಬಗ್ಗೆ ಯಶವಂತಪುರ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ರು ಆರೋಪಿಗಳನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಬರೋಬ್ಬರಿ 15 ವರ್ಷಗಳ ನಂತ್ರ ಈ ಕೊಲೆ ಕೇಸ್ ನ ಆರೋಪಿಗಳನ್ನು ಫಿಂಗರ್ ಪ್ರಿಂಟ್ ಕೊಟ್ಟ ಸುಳಿವಿನಿಂದಾಗಿ ಹಳೇ ಕೇಸ್ ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ರಾತ್ರಿ ವೇಳೆ ನಿರ್ಜನ ಪ್ರದೇಶಗಳು, ಪ್ರವಾಸಿತಾಣಗಳಲ್ಲಿ ದರೋಡೆ ಮಾಡಲು ಮುಂದಾಗಿದ್ದ ಗ್ಯಾಂಗ್ ವೊಂದನ್ನ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನ ಬಂಧನದ ಬಳಿಕ ಅವರ ಬೆರಳಚ್ಚು ತೆಗೆದು ಹಳೇ ಕೇಸ್ ಗಳಿಗೆ ಹೋಲಿಕೆ ಮಾಡಿದಾಗ 15 ವರ್ಷದ ಹಿಂದೆ ನಡೆದ ಕೊಲೆ ಕೇಸ್ ನ ಬೆರಳಚ್ಚಿಗೆ ಹೋಲಿಕೆಯಾಗಿದೆ. ಕೂಡಲೇ ಈ ಬಗ್ಗೆ ಯಶವಂತಪುರ ಪೊಲೀಸರಿಗೆ ಮಾಹಿತಿ ರವಾನಿಸಿ 15 ವರ್ಷ ಹಿಂದಿನ ಕೊಲೆ ಕೇಸ್ ಫೈಲ್ ಹೊರ ತೆಗೆದು ಪರಿಶೀಲನೆ ನಡೆಸಿದಾಗ ಇನ್ನೂ ಆರೋಪಿಗಳ ಬಂಧನವಾಗದೇ ಇರುವುದು ಗೊತ್ತಾಗಿದೆ. ಈ ವೇಳೆ ಬಂಧಿತ ದರೋಡೆ ಗ್ಯಾಂಗ್ ವಿಚಾರಣೆ ನಡೆಸಿದಾಗ ಕೊಲೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.
NEWS DESK
TIMES OF BENGALURU